ತಮ್ಮ ಮೇಲಿದ್ದ ಗಡಿಪಾರು ಆದೇಶಕ್ಕೆ ಕೋರ್ಟ್ನಿಂದ ತಡೆಯಾಜ್ಞೆ ತಂದು ನಗರಕ್ಕೆ ಕಾಲಿಡುತ್ತಿದ್ದಂತೆಯೇ, ತಾಲೂಕು ಪಂಚಾಯತ್ ಮಾಜಿ ಸದಸ್ಯ ಪ್ರಶಾಂತ್ ಗೋವೇಕರ್ ಅಕ್ರಮ ಮರಳು ಲೂಟಿಕೋರರ ನಿದ್ದೆಗೆಡಿಸಿದ್ದಾರೆ! ಇದು ಈಗ ಕಾರವಾರದಲ್ಲಿ ಚರ್ಚೆಗೆ ಗ್ರಾಸ್ ವಾಗಿದೆ.
ಕಾರವಾರ ತಾಲೂಕಿನ ಸಿದ್ದರ, ಕಿನ್ನರ, ಸುಂಕೇರಿ ಹಾಗೂ ಕದ್ರಾ ಭಾಗಗಳಲ್ಲಿ ಕಣ್ಣೆದುರೇ ರಾಜಾರೋಷವಾಗಿ ನೈಸರ್ಗಿಕ ಸಂಪತ್ತನ್ನು ಲೂಟಿ ಮಾಡುತ್ತಿದ್ದ ದಂಧೆಕೋರರ ಬೆನ್ನಟ್ಟಿದ ಅವರು, ಮರಳು ತುಂಬಿದ ಲಾರಿಗಳನ್ನು ತಡೆದು ನೇರವಾಗಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಭೂವಿಜ್ಞಾನಿ ಕೃಷ್ಣಮೂರ್ತಿ ಅವರಿಗೆ ಮಾಹಿತಿ ರವಾನಿಸಿ ಇಲಾಖೆಗೆ ಬಿಸಿ ಮುಟ್ಟಿಸಿದ್ದಾರೆ.

ಮಾಹಿತಿ ತಲುಪುತ್ತಿದ್ದಂತೆ ಅನಿವಾರ್ಯವಾಗಿ ಸ್ಥಳಕ್ಕಿಳಿದ ಅಧಿಕಾರಿಗಳು, ಅಕ್ರಮ ಮರಳು ಸಾಗಾಟದಲ್ಲಿ ತೊಡಗಿದ್ದ ಗೋವಾ ನೋಂದಣಿಯ GA-01-T-7949 ಹಾಗೂ GA-06-T-4712 ಸಂಖ್ಯೆಯ ಎರಡು ಲಾರಿಗಳನ್ನು ಜಪ್ತಿ ಮಾಡಿ ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯ ವಶಕ್ಕೆ ಒಪ್ಪಿಸಿದ್ದಾರೆ. ಪೊಲೀಸರು ಇದೀಗ ವಾಹನದ ಮೂಲ ಹಾಗೂ ದಾಖಲೆಗಳ ಪರಿಶೀಲನೆಗೆ ಇಳಿದಿದ್ದಾರೆ.

ಈ ದಿಢೀರ್ ಬೆಳವಣಿಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಕಣ್ಣುಮುಚ್ಚಾಲೆ ಆಟವನ್ನು ಸಾರ್ವಜನಿಕರ ಮುಂದೆ ತಂದಿದ್ದಾರೆ. ಊರಿಗೆ ನಾಗರಿಕನಿಗೆ ಅಕ್ರಮ ಮರಳು ಲೂಟಿಯ ಪ್ರತಿಯೊಂದು ಇಂಚಿಂಚು ಮಾಹಿತಿ ನಿಖರವಾಗಿ ಸಿಗುತ್ತದೆ ಎಂದಾದರೆ, ಇಲಾಖೆಯ ಅಧಿಕಾರಿಗಳಿಗೆ ಈ ಮಾಹಿತಿ ಏಕೆ ಸಿಗುತ್ತಿಲ್ಲವೇ ಎನ್ನುವ ವಿಷಯ ಸಾರ್ವಜನಿಕರಲ್ಲಿ ವ್ಯಕ್ತವಾಗಿದೆ. ನದಿಯ ಒಡಲನ್ನೇ ಬಗೆದು ಕೊಳ್ಳೆ ಹೊಡೆಯುತ್ತಿರುವುದನ್ನು ಇಲಾಖೆ ಅಧಿಕಾರಿಗಳು ತಡೆದು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಜನ ಆಗ್ರಹಿಸಿದ್ದಾರೆ.
