ಚಲಿಸುತ್ತಿದ್ದ ಬಸ್ನ ಟಯರ್ನ ಬೋಲ್ಟ್ಗಳು ಕಳಚಿ, ಟಯರ್ ಸಂಪೂರ್ಣವಾಗಿ ಬೇರ್ಪಡುವ ಹಂತಕ್ಕೆ ತಲುಪಿದ ಘಟನೆ ಶಿರಸಿ ನಗರದ ಶಿವಾಜಿಚೌಕದ ಬಳಿ ಸೋಮವಾರ ಸಂಭವಿಸಿದ್ದು, ಅದೃಷ್ಟವಶಾತ್ ಭಾರೀ ಅನಾಹುತವೊಂದು ತಪ್ಪಿದೆ.
ಚಂದ್ರಗುತ್ತಿಯಿಂದ ಶಿರಸಿ ಕಡೆಗೆ ಬರುತ್ತಿದ್ದ ಬಸ್ನಲ್ಲಿ ಈ ಘಟನೆ ನಡೆದಿದ್ದು, ಬಸ್ನಲ್ಲಿ 40ಕ್ಕೂ ಅಧಿಕ ವಿದ್ಯಾರ್ಥಿಗಳು ಸೇರಿದಂತೆ ಪ್ರಯಾಣಿಕರು ಇದ್ದರು ಎನ್ನಲಾಗಿದೆ. ಬಸ್ ಶಿವಾಜಿಚೌಕದ ಸಮೀಪ ಸಂಚರಿಸುತ್ತಿದ್ದ ವೇಳೆ ಟಯರ್ನ ಬೋಲ್ಟ್ಗಳು ಕಳಚಿಕೊಂಡಿದ್ದು, ಟಯರ್ ಕೇವಲ ಒಂದೇ ಬೋಲ್ಟ್ನ ಆಧಾರದಲ್ಲಿ ಉಳಿದಿತ್ತು ಎನ್ನಲಾಗಿದೆ.

ಚಲಿಸುತ್ತಿದ್ದ ಬಸ್ನ ಟಯರ್ ಸಂಪೂರ್ಣವಾಗಿ ಕಳಚಿ ಬಿದ್ದಿದ್ದರೆ, ನಿಯಂತ್ರಣ ತಪ್ಪಿ ಬಸ್ ಅಪಘಾತಕ್ಕೀಡಾಗುವ ಸಾಧ್ಯತೆ ಇತ್ತು. ಅದರಲ್ಲೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಸುತ್ತಿದ್ದ ಹಿನ್ನೆಲೆಯಲ್ಲಿ ಘಟನೆಯ ಗಂಭೀರತೆ ಮತ್ತಷ್ಟು ಹೆಚ್ಚಾಗಿದೆ.
ಬಸ್ನ ನಿರ್ವಹಣೆಯಲ್ಲಿ ಲೋಪವಾಗಿದೆಯೇ ಅಥವಾ ಚಾಲಕನ ಕಡೆಯಿಂದ ನಿರ್ಲಕ್ಷ್ಯವಾಗಿದೆಯೇ ಎಂಬುದು ತನಿಖೆಯಿಂದ ಸ್ಪಷ್ಟವಾಗಬೇಕಿದೆ. ಬಸ್ಗಳನ್ನು ರಸ್ತೆಗೆ ಇಳಿಸುವ ಮುನ್ನ ಟಯರ್, ಬೋಲ್ಟ್ ಸೇರಿದಂತೆ ಪ್ರಮುಖ ಭಾಗಗಳ ಸುರಕ್ಷತಾ ಪರಿಶೀಲನೆ ಸಮರ್ಪಕವಾಗಿ ನಡೆಯುತ್ತಿದೆಯೇ ಎಂಬ ಪ್ರಶ್ನೆಯೂ ಇದೀಗ ಎದುರಾಗಿದೆ.

ಅಪಾಯದ ಅಂಚಿನಲ್ಲಿದ್ದ ಬಸ್ನಲ್ಲಿದ್ದ ವಿದ್ಯಾರ್ಥಿಗಳು ಮತ್ತು ಪ್ರಯಾಣಿಕರು ಯಾವುದೇ ಗಾಯವಿಲ್ಲದೆ ಪಾರಾಗಿದ್ದು, ಸಂಭವಿಸಬಹುದಾಗಿದ್ದ ದೊಡ್ಡ ದುರಂತವೊಂದು ಕೂದಲೆಳೆಯ ಅಂತರದಲ್ಲಿ ತಪ್ಪಿದಂತಾಗಿದೆ.
