ಕಾರವಾರ: ಕಷ್ಟದ ನಡುವೆಯೂ ಕಲಿಕೆಯಲ್ಲಿ ಬೆಳಗುತ್ತಿರುವ ಪ್ರತಿಭೆಗೆ ಓಎಸ್ಜಿ ಗ್ರೂಪ್ ಕಾರವಾರ ಮತ್ತೊಮ್ಮೆ ಆಸರೆಯಾಗಿದೆ.
ಬಿಹಾರದ ಸಮಸ್ತಿಪುರದಿಂದ ಕೂಲಿಗಾಗಿ ಕಾರವಾರಕ್ಕೆ ಬಂದು, ಇಲ್ಲಿಯ ಭಾಷೆ ಕಲಿತು, ಅಭ್ಯಾಸದಲ್ಲಿ ಮೊದಲಿಗನಾಗಿ ನಿಲ್ಲುತ್ತಿರುವ ಅಸ್ನೋಟಿ ಶಿವಾಜಿ ವಿದ್ಯಾ ಮಂದಿರದ 8ನೇ ತರಗತಿ ವಿದ್ಯಾರ್ಥಿ ಸತ್ಯಕುಮಾರ್ ಪಾಸ್ವಾನ ಅವರಿಗೆ ಓಎಸ್ಜಿ ಗ್ರೂಪ್ ವತಿಯಿಂದ ಹೊಸ ಸೈಕಲ್ ಉಡುಗೊರೆಯಾಗಿ ನೀಡಲಾಯಿತು.
“ಭಾಷೆ ಬೇರೆಯಾದರೂ ಕನಸು ಒಂದೇ. ಶ್ರಮವಿದ್ದರೆ ಎಲ್ಲವೂ ಸಾಧ್ಯ” ಎಂದು ಹೇಳಿದ ಓಎಸ್ಜಿ ಗ್ರೂಪ್ ಅಧ್ಯಕ್ಷ ಇಂಜಿನಿಯರ್ ಪವನ್ ಸಾವಂತ್ ಅವರು, ಸತ್ಯಕುಮಾರ್ನ ಸಾಧನೆ ಕಂಡು ಮನ ತುಂಬಿ ಈ ಕೊಡುಗೆ ನೀಡಿದರು.
ಕಾರ್ಯಕ್ರಮದಲ್ಲಿ ಗ್ರೂಪ್ ಕಾರ್ಯದರ್ಶಿ ಎನ್.ಜಿ. ನಾಯ್ಕ ಅವರು ಸೈಕಲ್ ಎಂದರೆ ಕೇವಲ ವಾಹನವಲ್ಲ, ಅದು ಶಿಕ್ಷಣದ ಕಡೆಗೆ ಹೋಗುವ ಸೇತುವೆ. ಸುರಕ್ಷಿತವಾಗಿ ಓಡಿಸಿ, ಚೆನ್ನಾಗಿ ಓದಿ” ಎಂದು ಆಶೀರ್ವದಿಸಿದರು.
ಸದಸ್ಯ ಚಂದ್ರಕಾಂತ ಪೆಡ್ನೇಕರ “ನಿನ್ನ ಇಂದಿನ ಪೆಡಲ್, ನಾಳಿನ ಭವಿಷ್ಯದ ಚಕ್ರವನ್ನು ತಿರುಗಿಸುತ್ತದೆ. ದಿನಾ ರೈಡ್ ಮಾಡು, ರಾತ್ರಿ ಎಚ್ಚರದಿಂದ ಇರು ಎಂದು ಪ್ರೇರೇಪಿಸಿದರು.
ಸೈಕಲ್ ಕೈಗೆ ಬಂದ ಕ್ಷಣ ಕಣ್ಣಲ್ಲಿ ನೀರ ತುಂಬಿಸಿಕೊಂಡ ಸತ್ಯಕುಮಾರ್, “ಇದು ನನ್ನ ಜೀವನದ ಅತ್ಯಂತ ಖುಷಿಯ ದಿನ. ಈ ಸೈಕಲ್ ನನ್ನ ಶಾಲೆಯ ಕನಸಿಗೆ ರೆಕ್ಕೆ ಕೊಟ್ಟಿದೆ. ಧನ್ಯವಾದ ಓಎಸ್ಜಿ ಗ್ರೂಪ್” ಎಂದರು.
ಶಾಲಾ ಮುಖ್ಯೋಪಾಧ್ಯಾಯ ಡಾ. ಗಣೇಶ ಬಿಷ್ಟಣ್ಣನವರ ಅವರು “ಬಡ ಪ್ರತಿಭಾವಂತ ಮಕ್ಕಳಿಗೆ ಓಎಸ್ಜಿ ಗ್ರೂಪ್ ನಿಜವಾದ ಆಶಾಕಿರಣ. ಇಂತಹ ಸೇವೆ ಸಮಾಜಕ್ಕೆ ಮಾದರಿ” ಎಂದು ಕೊಂಡಾಡಿದರು.
ಕಾರ್ಯಕ್ರಮದಲ್ಲಿ ಸಂತೋಷ್ ಪಾಸ್ವಾನ ಉಪಸ್ಥಿತರಿದ್ದರು.
