ಕಾರವಾರ:ಕರ್ತವ್ಯ ನಿರತ ಅಂಗನವಾಡಿ ಶಿಕ್ಷಕಿಯೊಬ್ಬರ ಮೇಲೆ ಹಲ್ಲೆ ನಡೆಸಿ, ಅನುಚಿತವಾಗಿ ವರ್ತಿಸಿರುವ ಆಘಾತಕಾರಿ ಘಟನೆ ಕಾರವಾರ ತಾಲೂಕಿನ ಹಳಗಾ ಗ್ರಾಮದಲ್ಲಿ ನಡೆದಿದೆ. ಬಿ.ಎಲ್.ಒ ಕೂಡ ಆಗಿರುವ ಶಿಕ್ಷಕಿ ಮಂಗಳಾ ವಿಠ್ಠಲ ನಾಯ್ಕ ಅವರು ನೀಡಿದ ದೂರಿನನ್ವಯ ಹಳೆ ವಿದ್ಯಾರ್ಥಿ ವಿಲ್ಸನ್ ಫರ್ನಾಂಡೀಸ್ ಎಂಬಾತನ ವಿರುದ್ಧ ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜುಲೈ 16ರಂದು ಗ್ರಾಮ ಪಂಚಾಯಿತಿ ಕಚೇರಿ ಬಳಿ ವಿಶೇಷ ತೀವ್ರ ಪರಿಷ್ಕರಣೆ (SIR) ಅರ್ಜಿ ಭರ್ತಿ ಮಾಡುವ ವಿಚಾರದಲ್ಲಿ ಆರಂಭವಾದ ಇವರ ನಡುವಿನ ಮಾತಿನ ಚಕಮಕಿ, ಮರುದಿನ ವಿಕೋಪಕ್ಕೆ ತಿರುಗಿದೆ. ಮದೇವಾಡದ ಅಂಗನವಾಡಿ ಕೇಂದ್ರಕ್ಕೆ ನುಗ್ಗಿದ ಆರೋಪಿ ವಿಲ್ಸನ್, ಶಿಕ್ಷಕಿಯ ಮೇಲೆ ಹಲ್ಲೆ ನಡೆಸಿದ್ದಲ್ಲದೆ ಅಲ್ಲಿದ್ದ ಬಾಲಕಿಯರೊಂದಿಗೂ ಅಸಭ್ಯವಾಗಿ ನಡೆದುಕೊಂಡು ತೊಂದರೆ ಕೊಟ್ಟಿದ್ದಾನೆ.
ಘಟನೆಯ ಕುರಿತು ಮಾತನಾಡಿರುವ ಶಿಕ್ಷಕಿ ಮಂಗಳಾ, ಆರೋಪಿ ವಿಲ್ಸನ್ ತನ್ನ ಹಳೆಯ ವಿದ್ಯಾರ್ಥಿಯಾಗಿದ್ದು, ಆತ ತೀವ್ರ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಾನೆ ಎಂದು ತಿಳಿಸಿದ್ದಾರೆ. ಈ ಹಿಂದೆ ಇದೇ ರೀತಿಯ ನಡವಳಿಕೆಗಾಗಿ ಆತನಿಗೆ ಮಾನಸಿಕ ಚಿಕಿತ್ಸೆ ಕೊಡಿಸಲಾಗಿದ್ದರೂ, ಮನೆಗೆ ಮರಳಿದ ನಂತರ ಮತ್ತೆ ತನ್ನ ಉನ್ಮಾದದ ವರ್ತನೆಯನ್ನು ಮುಂದುವರಿಸಿದ್ದಾನೆ. ಆರೋಪಿಯ ಈ ನಡತೆಯಿಂದ ಸದ್ಯ ಗ್ರಾಮದ ಮಹಿಳೆಯರು ಮತ್ತು ಬಾಲಕಿಯರು ತೀವ್ರ ಭೀತಿಯಲ್ಲಿ ದಿನದೂಡುವಂತಾಗಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಚಿತ್ತಾಕುಲ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.
