ದಾಂಡೇಲಿ: ಸಮೀಪದ ಆಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಸಕಲಗದಲ್ಲಿ ಕಾಡುಹಂದಿಯೊಂದು ರೈತನ ಮೇಲೆ ಏಕಾಏಕಿ ದಾಳಿ ನಡೆಸಿ ತೀವ್ರವಾಗಿ ಗಾಯಗೊಳಿಸಿರುವ ಘಟನೆ ನಡೆದಿದೆ.
ಕೇರವಾಡ ಗ್ರಾಮದ ನಿವಾಸಿ ಪರಶುರಾಮ ಅರ್ಜುನ ಕದಂ (೪೫) ಗಾಯಗೊಂಡ ರೈತರಾಗಿದ್ದಾರೆ. ಇವರು ತಮ್ಮ ದನಕರುಗಳಿಗೆ ಮೇವು ತರಲೆಂದು ಸಕಲಗದ ಕಬ್ಬಿನ ಗದ್ದೆಗೆ ತೆರಳಿದ್ದರು. ಈ ವೇಳೆ ಕಬ್ಬಿನ ತೋಟದಿಂದ ಹಠಾತ್ತನೆ ನುಗ್ಗಿ ಬಂದ ಕಾಡುಹಂದಿ ಇವರ ಮೇಲೆ ದಾಳಿ ನಡೆಸಿದೆ. ಈ ಅನಿರೀಕ್ಷಿತ ದಾಳಿಯಿಂದಾಗಿ ಅವರ ಸೊಂಟ ಹಾಗೂ ಕಾಲಿನ ಭಾಗಕ್ಕೆ ಗಂಭೀರ ಗಾಯಗಳಾಗಿವೆ.
ದಾಳಿಯ ಬೆನ್ನಲ್ಲೇ ಗಾಯಾಳು ಪರಶುರಾಮ ಅವರನ್ನು ತಕ್ಷಣವೇ ನಗರದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ವಿಷಯ ತಿಳಿಯುತ್ತಿದ್ದಂತೆ ದಾಂಡೇಲಿ ಗ್ರಾಮೀಣ ಠಾಣೆಯ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಕಲೆಹಾಕಿದ್ದಾರೆ. ಘಟನೆ ಕುರಿತು ಅರಣ್ಯ ಇಲಾಖೆಯ ಅಧಿಕಾರಿಗಳಿಗೂ ಮಾಹಿತಿ ರವಾನಿಸಲಾಗಿದೆ.
