ಕಾರವಾರ:ಕರಾವಳಿ ಭಾಗದ ಸಮಗ್ರ ವಿಕಾಸಕ್ಕಾಗಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ‘ಸಾಗರಮಾಲಾ’ ಯೋಜನೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂದು ಎಂ.ಎ. ಗಫೂರ್ ಹೇಳಿದ್ದಾರೆ.
ಕಾರವಾರ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ಪತ್ರಿಕಾಗೋಷ್ಠಿ ನಡೆಸಿದ ಅವರು, ಈ ಭಾಗದ ಪ್ರಮುಖ ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ಕ್ಯಾಪ್ಟನ್ ಬ್ರಿಜೇಶ್ ಚೌಟ, ಕೋಟ ಶ್ರೀನಿವಾಸ ಪೂಜಾರಿ ಹಾಗೂ ಬಿ.ವೈ. ರಾಘವೇಂದ್ರ ಅವರೊಂದಿಗೆ ಈಗಾಗಲೇ ಈ ಕುರಿತು ಮಹತ್ವದ ಮಾತುಕತೆಗಳನ್ನು ನಡೆಸಲಾಗಿದ್ದು, ಸಿದ್ಧಪಡಿಸಲಾಗಿರುವ ವಿಸ್ತೃತ ಯೋಜನಾ ವರದಿಗಳನ್ನು ಅವರಿಗೆ ಹಸ್ತಾಂತರಿಸಲು ಮಂಡಳಿ ಕ್ರಮ ಕೈಗೊಂಡಿದೆ ಎಂದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜಂಟಿ ಸಹಯೋಗದೊಂದಿಗೆ ಈ ಬೃಹತ್ ಮೂಲಸೌಕರ್ಯ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೊಳಿಸುವ ಮೂಲಕ ಕರಾವಳಿ ತೀರದ ಆರ್ಥಿಕ ಹಾಗೂ ಪ್ರವಾಸೋದ್ಯಮ ಪ್ರಗತಿಗೆ ಹೊಸ ವೇಗ ನೀಡಲು ಮಂಡಳಿಯು ಬದ್ಧವಾಗಿದೆ. ಪ್ರಮುಖವಾಗಿ ಪರಿಸರಸ್ನೇಹಿ ‘ಕೊಚ್ಚಿ ವಾಟರ್ ಮೆಟ್ರೋ’ ಮಾದರಿಯ ಯೋಜನೆಯನ್ನು ಇಲ್ಲಿ ಜಾರಿಗೆ ತರುವ ಕುರಿತು ಚರ್ಚಿಸಲಾಯಿತು. ಕರಾವಳಿಯ ಹಿನ್ನೀರು (ಬ್ಯಾಕ್ ವಾಟರ್) ಬಳಸಿಕೊಂಡು ಸಂಚಾರ ನಡೆಸಲು ಈಗಾಗಲೇ 23 ಸ್ಟೇಷನ್ಗಳನ್ನು ಗುರುತಿಸಲಾಗಿದೆ. ಅದರಲ್ಲೂ ಪ್ರಮುಖವಾಗಿ ಕಾಳಿ ನದಿ ಹಾಗೂ ಹೊನ್ನಾವರದ ಶರಾವತಿ ನದಿಗಳನ್ನು ಜೋಡಿಸುವ ನಿಟ್ಟಿನಲ್ಲಿ ಪ್ರಾಥಮಿಕ ವರದಿ ಸಿದ್ಧವಾಗಿದ್ದು, ಮುಂದಿನ ದಿನಗಳಲ್ಲಿ ಟ್ರಾಫಿಕ್ ಸರ್ವೇ ನಡೆಸಿ ಸಮಗ್ರ ಯೋಜನಾ ವರದಿ (DPR) ಸಿದ್ಧಪಡಿಸಲಾಗುವುದು ಎಂದು ಅಧ್ಯಕ್ಷರು ತಿಳಿಸಿದರು. ಈ ಪರಿಸರಸ್ನೇಹಿ ಬ್ಯಾಟರಿ ಚಾಲಿತ ಬೋಟ್ಗಳ ಯೋಜನೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ಬೆಂಬಲ ನೀಡಲಿವೆ ಎಂದರು.
ಇದರೊಂದಿಗೆ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಾದ ‘ಸಾಗರಮಾಲಾ’, ‘ಪ್ರಸಾದಂ’ ಹಾಗೂ ‘ಭಾರತ್ ದರ್ಶನ್’ ಯೋಜನೆಗಳನ್ನು ಕರಾವಳಿಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಮಂಡಳಿ ನಿರ್ಧರಿಸಿದೆ. ಈ ಭಾಗದ ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ಕ್ಯಾಪ್ಟನ್ ಬ್ರಿಜೇಶ್ ಚೌಟ, ಕೋಟ ಶ್ರೀನಿವಾಸ ಪೂಜಾರಿ ಹಾಗೂ ಬಿ.ವೈ. ರಾಘವೇಂದ್ರ ಅವರೊಂದಿಗೆ ಈಗಾಗಲೇ ಮಾತುಕತೆ ನಡೆಸಲಾಗಿದ್ದು, ಸಿದ್ಧಪಡಿಸಲಾದ ಯೋಜನಾ ವರದಿಗಳನ್ನು ಅವರಿಗೆ ಹಸ್ತಾಂತರಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
2023ರಲ್ಲಿ ಪ್ರಾಧಿಕಾರದಿಂದ ‘ಅಭಿವೃದ್ಧಿ ಮಂಡಳಿ’ಯಾಗಿ ಮೇಲ್ದರ್ಜೆಗೆ ಏರಿರುವ ಈ ಸಂಸ್ಥೆಗೆ ಪ್ರಸ್ತುತ 10 ಕೋಟಿ ರೂಪಾಯಿ ಅನುದಾನ ಮಾತ್ರ ಸಿಗುತ್ತಿದ್ದು, ಇದು ಅತ್ಯಂತ ಕಡಿಮೆಯಾಗಿದೆ. ಮಂಡಳಿಯಲ್ಲಿ 19 ಶಾಸಕರು, 11 ವಿಧಾನ ಪರಿಷತ್ ಸದಸ್ಯರು ಹಾಗೂ 4 ಸಂಸದರು ಸೇರಿ ಒಟ್ಟು 31 ಜನ ಸದಸ್ಯರಿದ್ದು, ಕನಿಷ್ಠ 100 ರಿಂದ 200 ಕೋಟಿ ರೂಪಾಯಿ ವಿಶೇಷ ಅನುದಾನ ನೀಡುವಂತೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಲಾಗಿದೆ. ಸಭೆಯಲ್ಲಿ ಶಾಸಕರು ನೀಡಿದ ಬೇಡಿಕೆ ಪಟ್ಟಿಯ ಅನ್ವಯ 10 ಕೋಟಿ ರೂಪಾಯಿ ಮೌಲ್ಯದ ವಿವಿಧ ತುರ್ತು ಕಾಮಗಾರಿಗಳಿಗೆ ತಕ್ಷಣದ ಅನುಮೋದನೆ ನೀಡಲಾಗಿದ್ದು, ಕರಾವಳಿಯ ಮೂಲಭೂತ ಸೌಕರ್ಯ ವೃದ್ಧಿಗೆ ಪ್ರಾಧಿಕಾರ ಬದ್ಧವಾಗಿದೆ ಎಂದು ಎಂ.ಎ. ಗಫೂರ್ ತಿಳಿಸಿದರು.
