ದೇವಭೂಮಿ ಗೋಕರ್ಣಕ್ಕೆ ಬಂದಿದ್ದ ಬೆಂಗಳೂರಿನ ೬೮ ವರ್ಷದ ಹಿರಿಯ ನಾಗರಿಕರೊಬ್ಬರು ಅನುಮಾನಾಸ್ಪದವಾಗಿ ಸಮುದ್ರದ ಪಾಲಾಗಿದ್ದು, ಅವರ ಮೃತದೇಹ ಬುಧವಾರ ಇಲ್ಲಿನ ಮುಖ್ಯ ಕಡಲತೀರಕ್ಕೆ ತೇಲಿಬಂದಿದೆ.
ಬೆಂಗಳೂರು ಉತ್ತರದ ದಾಸರಹಳ್ಳಿ ನಿವಾಸಿ ಜೆ.ಎಸ್. ವೆಂಕಟೇಶ್ (೬೮) ಮೃತಪಟ್ಟ ದುರ್ದೈವಿ. ಬುಧವಾರ ರಾಮತೀರ್ಥ ಭಾಗದ ಕಡಲ ನೀರಿನಲ್ಲಿ ಅಪರಿಚಿತ ವ್ಯಕ್ತಿಯ ದೇಹ ತೇಲುತ್ತಿರುವುದನ್ನು ಕಂಡ ಸ್ಥಳೀಯ ಮೀನುಗಾರರು ತಕ್ಷಣವೇ ಕಡಲತೀರದ ಜಾಗೃತ ಸಿಬ್ಬಂದಿಗೆ ಮಾಹಿತಿ ರವಾನಿಸಿದರು. ವಿಷಯ ತಿಳಿದ ಬೀಚ್ ಸೂಪರ್ವೈಸರ್ ರವಿ ನಾಯ್ಕ್ ಪೊಲೀಸರಿಗೆ ವಿಷಯ ಮುಟ್ಟಿಸುವಷ್ಟರಲ್ಲಿ, ಸಮುದ್ರದ ತೆರೆಗಳಿಗೆ ಸಿಲುಕಿದ ಶವವು ಗೋಕರ್ಣದ ಮುಖ್ಯ ಬೀಚ್ ದಡ ಸೇರಿತ್ತು.
ತಕ್ಷಣವೇ ಕಾರ್ಯಪ್ರವೃತ್ತರಾದ ಲೈಫ್ಗಾರ್ಡ್ ಸಿಬ್ಬಂದಿಯಾದ ರೋಷನ್ ಖಾರ್ವಿ, ಮೋಹನ ಅಂಬಿಗ ಹಾಗೂ ಶಿವಪ್ರಸಾದ್ ಅಂಬಿಗ, ಹಗ್ಗದ ನೆರವಿನೊಂದಿಗೆ ಭೋರ್ಗರೆಯುವ ಅಲೆಗಳ ನಡುವೆಯೇ ಮೃತದೇಹವನ್ನು ದಡಕ್ಕೆ ಎಳೆದು ತಂದು ಆಂಬುಲೆನ್ಸ್ಗೆ ರವಾನಿಸಿದರು. ಸ್ಥಳಕ್ಕೆ ಗೋಕರ್ಣ ಠಾಣಾ ಪೊಲೀಸರು ಹಾಗೂ ಕರಾವಳಿ ಕಾವಲು ಪಡೆಯ ಸಿಬ್ಬಂದಿ ಭೇಟಿ ನೀಡಿ ಮಹಜರು ನಡೆಸಿದ್ದಾರೆ.
ಇವರು ಆಕಸ್ಮಿಕವಾಗಿ ಕಾಲುಜಾರಿ ಬಿದ್ದಿದ್ದಾರೆಯೇ ಅಥವಾ ಆತ್ಮಹತ್ಯೆಗೆ ಶರಣಾಗಿದ್ದಾರೆಯೇ ಎಂಬ ನಿಟ್ಟಿನಲ್ಲಿ ಗೋಕರ್ಣ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ
