ಚಾಲಕನ ನಿಯಂತ್ರಣ ತಪ್ಪಿದ ಹಾಲು ಸಾಗಾಟದ ಟ್ಯಾಂಕರ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ರಸ್ತೆ ಬದಿಗೆ ಪಲ್ಟಿಯಾದ ಘಟನೆ ಹೊನ್ನಾವರ ತಾಲೂಕಿನ ಆರೋಳ್ಳಿ ಸೇತುವೆ ಸಮೀಪ ಬುಧವಾರ ರಾತ್ರಿ ನಡೆದಿದೆ.
ಅಪಘಾತದಲ್ಲಿ ಟ್ಯಾಂಕರ್ನಲ್ಲಿದ್ದ ಅಪಾರ ಪ್ರಮಾಣದ ಹಾಲು ರಸ್ತೆಗೆ ಹಾಗೂ ಚರಂಡಿಗೆ ಹರಿದುಹೋಗಿದ್ದು, ಸ್ಥಳೀಯರ ಸಮಯಪ್ರಜ್ಞೆಯಿಂದ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಹಿರೇಕೆರೂರಿನಿಂದ ಹಾಲು ತುಂಬಿಸಿಕೊಂಡು ಕೇರಳದತ್ತ ತೆರಳುತ್ತಿದ್ದ ಟ್ಯಾಂಕರ್ ಆರೋಳ್ಳಿ ಸೇತುವೆ ಬಳಿ ಬರುತ್ತಿದ್ದ ವೇಳೆ ಚಾಲಕನ ನಿಯಂತ್ರಣ ಕಳೆದುಕೊಂಡಿದೆ. ಬಳಿಕ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ರಭಸವಾಗಿ ಡಿಕ್ಕಿ ಹೊಡೆದ ಟ್ಯಾಂಕರ್, ಕಂಬದ ಸಮೇತ ರಸ್ತೆ ಪಕ್ಕಕ್ಕೆ ಮಗುಚಿ ಬಿದ್ದಿದೆ.
ಡಿಕ್ಕಿಯ ಭಾರೀ ಶಬ್ದ ಕೇಳಿ ಸ್ಥಳೀಯ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿದ್ದು, ಟ್ಯಾಂಕರ್ನೊಳಗೆ ಸಿಲುಕಿಕೊಂಡಿದ್ದ ಚಾಲಕ ರಾಕೇಶ್ ಅವರನ್ನು ಸುರಕ್ಷಿತವಾಗಿ ಹೊರತೆಗೆದಿದ್ದಾರೆ. ಅಪಘಾತದ ರಭಸಕ್ಕೆ ಟ್ಯಾಂಕರ್ನಲ್ಲಿದ್ದ ಹಾಲು ಸೋರಿಕೆಯಾಗಿ ರಸ್ತೆಯಲ್ಲೆಲ್ಲ ಹರಿದುಹೋಗಿದೆ.
ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸ್ ವೃತ್ತ ನಿರೀಕ್ಷಕ ಸಿದ್ಧರಾಮೇಶ್ ಅವರು ಪರಿಶೀಲನೆ ನಡೆಸಿದ್ದು, ಘಟನೆ ಕುರಿತು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
