ಎರ್ನಾಕುಲಂನಿಂದ ಹಜರತ್ ನಿಜಾಮುದ್ದೀನ್ ಸೂಪರ್ಫಾಸ್ಟ್ ಎಕ್ಸ್ಪ್ರೆಸ್ ರೈಲಿನಲ್ಲಿ ಸಣ್ಣ ಮಾತಿನ ಚಕಮಕಿ ನಡೆದ ಘಟನೆ ಶನಿವಾರ ನಡೆದಿದೆ.
ಬೋಗಿಯಲ್ಲಿದ್ದ ನೀರು ಮತ್ತು ಚಹಾ ಮಾರಾಟಗಾರರ ಮೇಲೆ ಪ್ರಯಾಣಿಕರ ಗುಂಪೊಂದು ಹಲ್ಲೆ ನಡೆಸಿದ್ದು, ಘಟನೆಯಿಂದಾಗಿ ಭಟ್ಕಳ ರೈಲ್ವೆ ನಿಲ್ದಾಣದಲ್ಲಿ ಎಕ್ಸ್ಪ್ರೆಸ್ ರೈಲು ಒಂದು ಗಂಟೆಗೂ ಹೆಚ್ಚು ಕಾಲ ಸ್ಥಗಿತಗೊಂಡಿತ್ತು.

ರೈಲು ಚಲಿಸುತ್ತಿದ್ದಾಗ ಜನರಲ್ ಬೋಗಿಯಲ್ಲಿ ನೀರು ಪೂರೈಕೆ ಮಾಡುವ ವ್ಯಕ್ತಿಯ ಟ್ರಾಲಿ ಪ್ರಯಾಣಿಕನೊಬ್ಬನ ಕಾಲಿಗೆ ಬಲವಾಗಿ ತಾಗಿದೆ. ಈ ಸಣ್ಣ ವಿಚಾರಕ್ಕೆ ಆರಂಭವಾದ ಮಾತಿನ ಚಕಮಕಿ ಕೆಲ ಹೊತ್ತಿನ ನಂತರ ತಣ್ಣಗಾಯಿತಾದರೂ, ಆರೋಪಿ ಪ್ರಯಾಣಿಕನ ಜೊತೆಗಿದ್ದ ಗುಂಪು ಮತ್ತೆ ನೀರು ಮಾರಾಟಗಾರನನ್ನು ಹುಡುಕಿಕೊಂಡು ಹೊರಟಿದೆ.
ಆತ ಸಿಗದಿದ್ದಾಗ, ಅದೇ ಮಾರ್ಗದಲ್ಲಿ ಚಹಾ ಮಾರಾಟ ಮಾಡುತ್ತಿದ್ದ ಇನ್ನೊಬ್ಬ ವ್ಯಕ್ತಿಯ ಮೇಲೆ ಈ ಆಕ್ರೋಶಿತ ಗುಂಪು ಮುಗಿಬಿದ್ದಿದೆ.
ಸ್ಥಿತಿ ಗಂಭೀರವಾಗುತ್ತಿದ್ದಂತೆ ಎಚ್ಚೆತ್ತ ರೈಲಿನ ಗಾರ್ಡ್ ಮತ್ತು ಸಿಬ್ಬಂದಿ ಭಟ್ಕಳ ರೈಲ್ವೆ ನಿಲ್ದಾಣಕ್ಕೆ ಮಾಹಿತಿ ನೀಡಿ ರೈಲನ್ನು ತುರ್ತಾಗಿ ತಡೆದು ನಿಲ್ಲಿಸಿದರು. ಸ್ಥಳಕ್ಕೆ ಧಾವಿಸಿದ ರೈಲ್ವೆ ಪೊಲೀಸರು (RPF) ಪರಿಸ್ಥಿತಿಯನ್ನು ಹತೋಟಿಗೆ ತಂದು, ಹಲ್ಲೆ ನಡೆಸಿ ತಲೆಮರೆಸಿಕೊಂಡಿದ್ದ ಪ್ರಯಾಣಿಕರ ಗುಂಪಿಗಾಗಿ ಇಡೀ ರೈಲಿನಲ್ಲಿ ಜಾಲಾಡಿದರು. ಆದರೆ, ಗಲಾಟೆ ಮಾಡಿದ ಪ್ರಯಾಣಿಕ ಅಷ್ಟರಲ್ಲೇ ನಾಪತ್ತೆಯಾಗಿದ್ದರು.
ಹಲ್ಲೆ ಮಾಡಿದವರನ್ನು ಪತ್ತೆ ಹಚ್ಚುವ ಸುದೀರ್ಘ ಪರಿಶೀಲನೆಯಿಂದಾಗಿ ಸೂಪರ್ಫಾಸ್ಟ್ ಎಕ್ಸ್ಪ್ರೆಸ್ ಭಟ್ಕಳದಲ್ಲೇ ಗಂಟೆಗಟ್ಟಲೆ ನಿಲ್ಲಬೇಕಾಯಿತು.
ಈ ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಕೊಂಕಣ ರೈಲ್ವೆ ಹಿರಿಯ ಅಧಿಕಾರಿ ಸುಧಾ ಕೃಷ್ಣಮೂರ್ತಿ ಅವರು ಬಿಜೂರಿನಲ್ಲಿ ರೈಲ್ವೆ ಟ್ರ್ಯಾಕನ್ ಎಂಜಿನಿಯರಿಂಗ್ ಕಾಮಗಾರಿ ನಡೆಯುತ್ತಿದ್ದರಿಂದ ಇಲಾಖೆಯಿಂದಲೇ ಭಟ್ಕಳದಲ್ಲಿ ರೈಲ್ವೆ ನಿಲ್ಲಿಸಲಾಗಿತ್ತು. ಗಲಾಟೆಗೂ ರೈಲ್ವೆ ನಿಲ್ಲಿಸಿದ್ದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿದ್ದಾರೆ. ಗಲಾಟೆಗೆ ಸಂಬಂಧಿಸಿದಂತೆ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಧಾವಿಸಿ ಕ್ರಮಕೈಗೊಂಡಿದ್ದಾರೆ ಎಂದಿದ್ದಾರೆ.
