ಜುಲೈ 26, 2026
ಭಾನುವಾರ

ನಮ್ಮನ್ನು ಅನುಸರಿಸಿ

Trending

ಸಾಕ್ಷ್ಯ ತಂದ್ರೆ ಸನ್ಯಾಸ! ಅಸ್ನೋಟಿಕರ್‌ಗೆ ಜಗದೀಶ ನಾಯಕ ಸವಾಲು

Pakka News Web • 30 ಜೂನ್ 2026,

ಕಾರವಾರ: ಕಾರವಾರ-ಅಂಕೋಲಾ ಕ್ಷೇತ್ರದ ರಾಜಕೀಯದ ಸದ್ಯದ ಚರ್ಚೆಗಳಿಗೆ ಬಿಜೆಪಿ ಮಾಧ್ಯಮ ವಕ್ತಾರ ಜಗದೀಶ ನಾಯಕ ಮೊಗಟಾ ತೀಕ್ಷ್ಣ ತಿರುಗೇಟು ನೀಡಿದ್ದಾರೆ. ಮಾಜಿ ಶಾಸಕ ಆನಂದ ಅಸ್ನೋಟಿಕರ್ ಅವರ ಅಸ್ತಿತ್ವವನ್ನೇ ಪ್ರಶ್ನಿಸಿರುವ ಅವರು, ಅಸ್ನೋಟಿಕರ್ ಪ್ರಸ್ತುತ ರಾಜಕೀಯ ಚಿತ್ರಣದಲ್ಲೇ ಇಲ್ಲ, ಇನ್ನು ಹಾದಿ-ಬೀದಿಯಲ್ಲಿ ಹೋಗುವವರ ಆರೋಪಗಳಿಗೆ ಉತ್ತರಿಸುವ ಅಗತ್ಯ ನಮಗಿಲ್ಲ ಎಂದು ಖಾರವಾಗಿ ಹೇಳಿದ್ದಾರೆ.

ಕಳೆದ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ನಡೆದಿದೆ ಎನ್ನಲಾದ ಷಡ್ಯಂತ್ರದ ಆರೋಪಕ್ಕೆ ಬಹಿರಂಗ ಸವಾಲು ಹಾಕಿದ ನಾಯಕ, ಪಕ್ಷದ ವಿರುದ್ಧ ಕತ್ತಿ ಮಸೆದಿದ್ದಕ್ಕೆ ಒಂದೇ ಒಂದು ಸಾಕ್ಷ್ಯ ಕೊಟ್ಟರೂ ನಾನು ರಾಜಕೀಯ ಸನ್ಯಾಸ ಸ್ವೀಕರಿಸಲು ಸಿದ್ಧ ಎಂದು ಗುಡುಗಿದ್ದಾರೆ. ಅಲ್ಲದೆ, ಅಸ್ನೋಟಿಕರ್ ಸದ್ಯ ಯಾವ ಪಕ್ಷದಲ್ಲಿದ್ದಾರೆ ಎಂಬುದನ್ನು ಮೊದಲು ಅವರನ್ನೇ ಕೇಳಿ ಎಂದು ಮಾಧ್ಯಮಗಳಿಗೆ ಮರುಪ್ರಶ್ನೆ ಹಾಕಿದ್ದಾರೆ.

 ಕಳೆದ ಚುನಾವಣೆಯ ಸಂದರ್ಭದಲ್ಲಿ ಜೆಡಿಎಸ್ ಮಾಡಿರುವ ಆರೋಪಗಳ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ತಿರುಗೇಟು ನೀಡಿದ ಅವರು, ಪಕ್ಷದ ವಿರುದ್ಧ ಷಡ್ಯಂತ್ರ ನಡೆಸಿದ್ದರ ಕುರಿತು ಯಾರಾದರೂ ಸಾಕ್ಷ್ಯ ನೀಡಿದರೆ ತಾವು ರಾಜಕೀಯ ಸನ್ಯಾಸ ಸ್ವೀಕರಿಸುವುದಾಗಿ ಸವಾಲು ಹಾಕಿದರು. ರಾಜಕೀಯದಲ್ಲಿ ಸಕ್ರಿಯವಾಗಿಲ್ಲದೇ ಇರುವವರು ಮಾಡುವ ಆರೋಪಗಳಿಗೆ ತಾವು ಉತ್ತರ ನೀಡಬೇಕಾಗಿಲ್ಲ ಎಂದ ಅವರು, ಆನಂದ ಅಸ್ನೋಟಿಕರ್ ಅವರು ಪ್ರಸ್ತುತ ಜೆಡಿಎಸ್‌ನಲ್ಲಿ ಇದ್ದಾರೆಯೋ ಇಲ್ಲವೋ ಎನ್ನುವುದನ್ನು ಮೊದಲು ಮಾಧ್ಯಮದವರೇ ಅವರಿಗೆ ಕೇಳಬೇಕು ಎಂದರು.

ಮಾಜಿ ಶಾಸಕಿ ರೂಪಾಲಿ ನಾಯ್ಕ ಅವರು ಕ್ಷೇತ್ರದಲ್ಲಿ ಕೇವಲ ಒಂದು ವಾರದ ಕಾಲ ಸಂಚರಿಸಿದಷ್ಟು ಕೆಲಸವನ್ನು ಅಸ್ನೋಟಿಕರ್ ಅವರು ಐದು ವರ್ಷಗಳ ಅವಧಿಯಲ್ಲೂ ಮಾಡಿಲ್ಲ ಎಂದು ಅವರು ಟೀಕಿಸಿದರು. ಪ್ರಸ್ತುತ ಶಾಸಕ ಸತೀಶ್ ಸೈಲ್ ಅವರು ಮಾಡಿರುವ ಕಾರ್ಯಗಳಿಗಿಂತಲೂ ನೂರು ಪಟ್ಟು ಹೆಚ್ಚಿನ ರೀತಿಯಲ್ಲಿ ಮಾಜಿ ಶಾಸಕಿ ರೂಪಾಲಿ ನಾಯ್ಕ ಅವರು ಕಾರವಾರ-ಅಂಕೋಲಾ ಕ್ಷೇತ್ರದ ಮತದಾರರಿಗೆ ನೆರವಾಗಿದ್ದಾರೆ ಎಂದು ನಾಯಕ ತಿಳಿಸಿದರು.

ಇದೇ ವೇಳೆ ಕಾರವಾರ-ಅಂಕೋಲಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಗೆ ಟಿಕೆಟ್ ಸಿಕ್ಕರೆ ನಿಮ್ಮ ನಿಲುವು ಏನು ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಜೆಡಿಎಸ್‌ಗೆ ಇಲ್ಲಿ ಅವಕಾಶವೇ ಇಲ್ಲ ಎಂದಮೇಲೆ ನಿಲುವು ಸ್ಪಷ್ಟಪಡಿಸುವ ಅಗತ್ಯತೆ ಬರುವುದಿಲ್ಲ. ಮುಂದಿನ ಚುನಾವಣೆಯಲ್ಲಿ ರೂಪಾಲಿ ನಾಯ್ಕ ಅವರೇ ಈ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.


ಪ್ರಚಾರ #7
ಜಾಹೀರಾತು ಸ್ಥಳ ಲಭ್ಯವಿದೆ
336x280
ಪ್ರಚಾರ #26
ಜಾಹೀರಾತು ಸ್ಥಳ ಲಭ್ಯವಿದೆ
300x250