ಕುಮಟಾ: ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದ ಕಾಡುಹಂದಿಯೊಂದು ನಾಯಿಗಳ ಬೆನ್ನಟ್ಟುವಿಕೆಯಿಂದ ತಪ್ಪಿಸಿಕೊಳ್ಳುವ ವೇಳೆ ಬಾವಿಗೆ ಬಿದ್ದ ಘಟನೆ ಕುಮಟಾ ತಾಲೂಕಿನ ಬರ್ಗಿ ಗ್ರಾಮದಲ್ಲಿ ನಡೆದಿದೆ.
ಬರ್ಗಿ ಗ್ರಾಮದ ಭತ್ತದ ಗದ್ದೆಯತ್ತ ನುಗ್ಗಿದ್ದ ಕಾಡುಹಂದಿಯನ್ನು ನಾಯಿಗಳು ಅಟ್ಟಿಸಿಕೊಂಡು ಬಂದಿವೆ. ಆತಂಕಗೊಂಡ ಹಂದಿ ಓಡಿಹೋಗುವ ಭರದಲ್ಲಿ ಸಮೀಪದ ಬಾವಿಗೆ ಬಿದ್ದಿದೆ. ಬಾವಿಗೆ ಬಿದ್ದ ಕಾಡುಹಂದಿ ಹೊರಬರಲಾಗದೆ ಪರದಾಡುತ್ತಿರುವುದನ್ನು ಗಮನಿಸಿದ ಸ್ಥಳೀಯರು ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.
ತಕ್ಷಣ ಸ್ಥಳಕ್ಕೆ ಆಗಮಿಸಿದ ವನ್ಯಜೀವಿ ರಕ್ಷಕ ಅಶೋಕ ನಾಯ್ಕ ಅವರು ಸ್ಥಳೀಯರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಯ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸಿ ಕಾಡುಹಂದಿಯನ್ನು ಸುರಕ್ಷಿತವಾಗಿ ಬಾವಿಯಿಂದ ಮೇಲಕ್ಕೆತ್ತಿ ರಕ್ಷಿಸಿದರು. ಬಳಿಕ ಅದನ್ನು ಸುರಕ್ಷಿತವಾಗಿ ಕಾಡಿನತ್ತ ಬಿಡಲಾಯಿತು.
ಕಾಡು ಪ್ರದೇಶದಿಂದ ಆಹಾರಕ್ಕಾಗಿ ನಾಡಿನತ್ತ ವನ್ಯಜೀವಿಗಳು ಬರುತ್ತಿರುವ ಸಂದರ್ಭಗಳಲ್ಲಿ ಇಂತಹ ಘಟನೆಗಳು ನಡೆಯುತ್ತಿದ್ದು, ತೆರೆದ ಬಾವಿಗಳು ವನ್ಯಜೀವಿಗಳಿಗೆ ಅಪಾಯಕಾರಿಯಾಗುತ್ತಿವೆ ಎಂಬುದು ಈ ಘಟನೆ ಮತ್ತೊಮ್ಮೆ ಎಚ್ಚರಿಸಿದೆ.
